1 ಕೊಲೆಗಡುಕರ ಆ ಪಟ್ಟಣಕ್ಕೆ ಬಹಳ ಕೆಡುಕು ಉಂಟಾಗುವದು.
2 ಚಾವಟಿಯ ಚಟಾರವೆಂಬ ಶಬ್ಧವನ್ನು ನೀನು ಕೇಳಬಹುದು.
3 ಕುದುರೆಗಳ ಮೇಲಿರುವ ಸೈನಿಕರು ಆಕ್ರಮಣವೆಸಗಿದ್ದಾರೆ.
4 ಇದಕ್ಕೆಲ್ಲಾ ಕಾರಣ ನಿನೆವೆ.
5 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ:
6 ನಿನ್ನ ಮೇಲೆ ಹೊಲಸನ್ನು ಬಿಸಾಡುವೆನು.
7 ನಿನ್ನನ್ನು ನೋಡಿದವರೆಲ್ಲರು ದಂಗುಬಡಿಯಲ್ಪಡುವರು.
8 ನಿನೆವೆಯೇ, ನೀನು ನೈಲ್ ನದಿಯ ದಡದಲ್ಲಿರುವ ತೆಬೆಸ್ ಗಿಂತಲೂ ಉತ್ತಮಳೋ? ಇಲ್ಲ. ತೆಬೆಸಿನ ಸುತ್ತಲೂ ನೀರು ಇತ್ತು. ಆ ನೀರು ಆಕೆಯನ್ನು ತನ್ನ ವೈರಿಗಳಿಂದ ಕಾಪಾಡಲು ಶಕ್ತವಾಯಿತು. ಆ ನೀರನ್ನು ಆಕೆಯು ಗೋಡೆಯಂತೆ ಉಪಯೋಗಿಸಿದಳು.
9 ಇಥಿಯೋಫಿಯಾ ಮತ್ತು ಈಜಿಪ್ಟ್ ತೆಬೆಸ್ಗೆ ಹೆಚ್ಚಿನ ಬಲವನ್ನು ಕೊಟ್ಟವು. ಸುದಾನ್ ಮತ್ತು ಲಿಬ್ಯ ಆಕೆಯನ್ನು ಸಹಕರಿಸಿದವು.
10 ಆದರೆ ತೆಬೆಸ್ ಸೋಲಿಸಲ್ಪಟ್ಟಿತು. ಆಕೆಯ ಪ್ರಜೆಗಳು ಬೇರೆ ದೇಶಕ್ಕೆ ಕೈದಿಗಳಾಗಿ ಒಯ್ಯಲ್ಪಟ್ಟರು. ಸೈನಿಕರು ಆಕೆಯ ಹಸುಗೂಸುಗಳನ್ನು ರಸ್ತೆಯ ಮೂಲೆಮೂಲೆಗಳಲ್ಲಿ ಹೊಡೆದು ಸಾಯಿಸಿದರು. ತಮ್ಮಲ್ಲಿ ಯಾರು ಉನ್ನತ ಅಧಿಕಾರಿಗಳನ್ನು ಗುಲಾಮರನ್ನಾಗಿ ಉಪಯೋಗಿಸಬೇಕೆಂಬದಾಗಿ ಚೀಟುಹಾಕಿದರು. ಅವರು ತೆಬೆಸಿನ ಮುಖ್ಯ ಅಧಿಕಾರಿಗಳನ್ನು ಸಂಕೋಲೆಗಳಿಂದ ಬಂಧಿಸಿದರು.
11 ಆದ್ದರಿಂದ ನಿನೆವೆಯೇ, ನೀನು ಸಹ ಕುಡಿದು ಅಮಲೇರಿದವರಂತೆ ಕೆಳಗೆ ಬಿದ್ದುಬಿಡುವೆ. ನೀನು ಅಡಗಿಕೊಳ್ಳಲು ಪ್ರಯತ್ನಿಸುವೆ. ವೈರಿಯಿಂದ ತಪ್ಪಿಸಿಕೊಳ್ಳಲು ಸುರಕ್ಷಿತವಾದ ಸ್ಥಳವನ್ನು ಹುಡುಕುವೆ.
12 ಆದರೆ ನಿನೆವೆಯೇ, ನಿನ್ನ ಎಲ್ಲಾ ಬಲವಾದ ಬುರುಜುಗಳು ಅಂಜೂರದ ಮರದಂತಿರುವವು. ಹೊಸ ಅಂಜೂರ ಹಣ್ಣುಗಳು ಮಾಗುವವು. ಒಬ್ಬನು ಬಂದು ಮರವನ್ನು ಅಲ್ಲಾಡಿಸಲು ಅಂಜೂರ ಹಣ್ಣುಗಳು ಅಲ್ಲಾಡಿಸುವವನ ಬಾಯಿಗೆ ಬೀಳುವವು. ಅವನು ಅವುಗಳನ್ನು ತಿಂದುಬಿಡುವನು; ಅವು ಇಲ್ಲವಾಗುವವು.
13 ನಿನೆವೆಯೇ, ನಿನ್ನ ಜನರೆಲ್ಲಾ ಹೆಂಗಸರಂತೆ, ವೈರಿ ಸೈನಿಕರು ಅವರನ್ನು ಹಿಡಿದುಕೊಳ್ಳಲು ತಯಾರಾಗಿದ್ದಾರೆ. ನಿನ್ನ ದೇಶದ ದ್ವಾರಗಳು, ವೈರಿಗಳು ಪ್ರವೇಶಿಸುವಂತೆ ಅಗಲವಾಗಿ ತೆರೆಯಲ್ಪಟ್ಟಿವೆ. ದ್ವಾರದ ಬಾಗಿಲಿನ ಅಡ್ಡಪಟ್ಟಿಯು ಬೆಂಕಿಯಿಂದ ಸುಟ್ಟಿರುತ್ತದೆ.
14 ನೀರನ್ನು ತಂದು ಪಟ್ಟಣದೊಳಗೆ ಶೇಖರಿಸಿಡು. ಯಾಕೆಂದರೆ ವೈರಿ ಸೈನ್ಯವು ನಿನ್ನ ನಗರವನ್ನು ಮುತ್ತುವವು. ನಗರದೊಳಗೆ ಅನ್ನ ನೀರನ್ನು ಯಾರಿಗೂ ತರಲು ಬಿಡುವುದಿಲ್ಲ. ನಿನ್ನ ಬುರುಜುಗಳನ್ನು ಬಲಪಡಿಸಿಕೊ. ಹೆಚ್ಚು ಇಟ್ಟಿಗೆಗಳನ್ನು ಮಾಡುವಂತೆ ಆವೆಮಣ್ಣನ್ನು ಶೇಖರಿಸು. ಗಾರೆಯನ್ನು ಕಲಸಿಕೊ. ಇಟ್ಟಿಗೆಗಳನ್ನು ಮಾಡುವ ಅಚ್ಚನ್ನು ತೆಗೆದುಕೊ.
15 ಇವೆಲ್ಲವನ್ನು ನೀನು ಮಾಡಬಹುದು. ಆದರೂ ಬೆಂಕಿಯು ನಿನ್ನನ್ನು ಸಂಪೂರ್ಣವಾಗಿ ನಾಶಮಾಡುವುದು. ಖಡ್ಗವು ನಿನ್ನನ್ನು ಸಾಯಿಸುವದು. ನಿನ್ನ ದೇಶವು ಮಿಡತೆಗಳ ಹಿಂಡಿನಿಂದ ತಿಂದುಹಾಕಲ್ಪಟ್ಟ ದೇಶದಂತೆ ಕಾಣುವುದು.
16 ನಿನ್ನಲ್ಲಿ ಅನೇಕ ವ್ಯಾಪಾರಸ್ಥರು ಊರೂರಿಗೆ ತಿರುಗಿ ವ್ಯಾಪಾರ ಮಾಡುವವರಿದ್ದಾರೆ. ಅವರು ಆಕಾಶದಲ್ಲಿರುವ ನಕ್ಷತ್ರಗಳಷ್ಟು ಇದ್ದಾರೆ. ಅವರು ಮಿಡತೆಗಳಂತೆ ಬಂದು, ಎಲ್ಲವನ್ನು ತಿಂದು ಮುಗಿಸಿದ ಬಳಿಕ ಹೋಗುವಂಥವರಾಗಿದ್ದಾರೆ.
17 ನಿನ್ನ ಸರಕಾರದ ಅಧಿಕಾರಿಗಳು ಸಹ ಮಿಡತೆಗಳಂತಿದ್ದಾರೆ. ಅವರು ಚಳಿಯ ದಿವಸದಲ್ಲಿ ಕಲ್ಲಿನ ಗೋಡೆಯ ಮೇಲೆ ಬಂದು ಕುಳಿತುಕೊಳ್ಳುವ ಮಿಡತೆಯಂತಿದ್ದಾರೆ. ಆದರೆ ಸೂರ್ಯನು ಮೇಲೆ ಬಂದಾಗ ಬಿಸಿಲು ಏರಿ ಕಲ್ಲು ಬಿಸಿಯಾದಾಗ ಆ ಮಿಡತೆಗಳೆಲ್ಲಾ ಹಾರಿಹೋಗುವವು. ಅವು ಎಲ್ಲಿಗೆ ಹೋದವು ಎಂದು ಯಾರಿಗೂ ಗೊತ್ತಿಲ್ಲ. ನಿನ್ನ ಅಧಿಕಾರಿಗಳೂ ಅದೇ ರೀತಿಯಲ್ಲಿರುವರು.
18 ಅಶ್ಶೂರದ ಅರಸನೇ, ನಿನ್ನ ಕುರುಬರು ನಿದ್ರಿಸುತ್ತಿದ್ದಾರೆ. ಆ ಬಲಾಢ್ಯ ಕುರುಬರು ನಿದ್ರೆ ಮಾಡುತ್ತಿದ್ದಾರೆ. ಮತ್ತು ನಿನ್ನ ಕುರಿಗಳು ಬೆಟ್ಟಗಳ ಮೇಲೆ ಚದರಿಹೋಗಿವೆ. ಅವುಗಳನ್ನು ಹಿಂತಿರುಗಿಸಿ ಒಟ್ಟುಗೂಡಿಸಲು ಯಾರೂ ಇಲ್ಲ.
19 ನಿನೆವೆಯೇ, ನೀನು ತೀವ್ರವಾದ ಗಾಯಹೊಂದಿರುವೆ. ಯಾವದೂ ನಿನ್ನನ್ನು ಗುಣಪಡಿಸಲಾರದು. ನಿನ್ನ ನಾಶನದ ಸುದ್ದಿ ಕೇಳಿದವರೆಲ್ಲರೂ ಚಪ್ಪಾಳೆ ತಟ್ಟುವರು. ಅವರು ಹರ್ಷಿಸುವರು. ಯಾಕೆಂದರೆ ನಿನಗಾದ ತೀವ್ರ ಗಾಯದ ನೋವನ್ನು ಅವರೆಲ್ಲರೂ ಅನುಭವಿಸಿದರು.