1 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ: “ನನ್ನ ಮಾರ್ಗವನ್ನು ಸಿದ್ಧಮಾಡಲು ನಾನು ಮುಂದೂತನನ್ನು ಕಳುಹಿಸುತ್ತೇನೆ. ನೀವು ಹುಡುಕುತ್ತಿರುವ ಧಣಿಯು ತನ್ನ ಆಲಯಕ್ಕೆ ಬರುತ್ತಾನೆ. ಹೌದು, ನಿಮಗೆ ಬೇಕಾಗಿರುವ ಹೊಸ ಒಡಂಬಡಿಕೆಯ ಸಂದೇಶಕನು ನಿಜವಾಗಿಯೂ ಬರುತ್ತಿದ್ದಾನೆ.
2 “ಆ ಸಮಯಕ್ಕಾಗಿ ಯಾರೂ ಸಿದ್ಧಮಾಡಿಕೊಳ್ಳಲಾರರು. ಯಾರೂ ಆತನು ಬರುವಾಗ ಆತನಿಗೆ ವಿರುದ್ಧವಾಗಿ ನಿಲ್ಲರು. ಆತನು ಸುಡುವ ಬೆಂಕಿಯಾಗಿರುವನು. ಆತನು ಶಕ್ತಿಯುತವಾದ ಸಾಬೂನಿನಂತೆ ಕೊಳೆಯನ್ನು ಹೋಗಲಾಡಿಸಿ ಶುದ್ಧಮಾಡುವನು.
3 ಆತನು ಲೇವಿಯರನ್ನು ಶುದ್ಧಮಾಡುವನು. ಅವರನ್ನು ಬೆಂಕಿಯಿಂದ ಪರಿಶುದ್ಧ ಮಾಡುವನು. ಶುದ್ಧ ಬೆಳ್ಳಿ ಚಿನ್ನದಂತೆ ಆತನು ಅವರನ್ನು ಶುದ್ಧಿಮಾಡುವನು. ಆಗ ಅವರು ಯೆಹೋವನಿಗೆ ಕಾಣಿಕೆಗಳನ್ನು ತರುವರು; ಸರಿಯಾದ ರೀತಿಯಲ್ಲಿ ಕಾಣಿಕೆಗಳನ್ನು ಅರ್ಪಿಸುವರು.
4 ಜೆರುಸಲೇಮಿನಿಂದಲೂ ಯೆಹೂದದಿಂದಲೂ ಯೆಹೋವನು ಕಾಣಿಕೆಗಳನ್ನು ಸ್ವೀಕರಿಸುವನು. ಹಿಂದಿನ ಕಾಲದಲ್ಲಿದ್ದಂತೆಯೇ ಈಗಲೂ ಆಗುವದು. ಬಹಳ ವರ್ಷಗಳ ಹಿಂದಿನ ಕಥೆಯೇ ಈಗಲೂ ಆಗುವದು.
5 ಆಗ ನಾನು ನಿಮ್ಮ ಬಳಿಗೆ ಬಂದು ಯೋಗ್ಯವಾದ ಕಾರ್ಯವನ್ನು ಮಾಡುವೆನು. ದುಷ್ಟ ಕ್ರಿಯೆಗಳನ್ನು ಮಾಡಿದ ಜನರ ಬಗ್ಗೆ ನ್ಯಾಯಾಧೀಶರೊಡನೆ ದೂರು ಹೇಳುವ ಮನುಷ್ಯನಂತಿರುವೆನು. ಕೆಲವರು ಮಾಟಮಂತ್ರ ಮಾಡುವರು; ಕೆಲವರು ವ್ಯಭಿಚಾರ ಮಾಡುವರು; ಕೆಲವರು ಸುಳ್ಳು ವಾಗ್ದಾನಗಳನ್ನು ಮಾಡುವರು; ಕೆಲವರು ಕೂಲಿಯಾಳುಗಳಿಗೆ ಹೇಳಿದ ಕೂಲಿಯನ್ನು ಕೊಡದೆ ಅವರಿಗೆ ಮೋಸಮಾಡುವರು. ಜನರು ವಿಧವೆಯರಿಗೂ ಅನಾಥರಿಗೂ ಸಹಾಯ ಮಾಡುವದಿಲ್ಲ. ಪರದೇಶಿಗಳಿಗೆ ಸಹಾಯ ಮಾಡುವದಿಲ್ಲ. ನನಗೆ ಗೌರವ ಸಲ್ಲಿಸುವದಿಲ್ಲ.” ಇದು ಸರ್ವಶಕ್ತನಾದ ಯೆಹೋವನ ನುಡಿ.
6 “ನಾನು ದೇವರಾದ ಯೆಹೋವನು. ನಾನು ಬದಲಾಗದ ದೇವರು. ನೀವು ಯಾಕೋಬನ ಮಕ್ಕಳು. ನೀವು ಸಂಪೂರ್ಣವಾಗಿ ನಾಶ ಹೊಂದಲಿಲ್ಲ.
7 ನೀವು ನನ್ನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ನಿಮ್ಮ ಪೂರ್ವಿಕರು ನನ್ನನ್ನು ಅನುಸರಿಸುವದನ್ನು ನಿಲ್ಲಿಸಿಬಿಟ್ಟಿದ್ದರು. ನೀವು ಹಿಂತಿರುಗಿ ನನ್ನ ಬಳಿಗೆ ಬಂದರೆ ನಾನು ನಿಮ್ಮ ಬಳಿಗೆ ಬರುವೆನು.” ಇದು ಸರ್ವಶಕ್ತನಾದ ಯೆಹೋವನ ನುಡಿ.
8 ದೇವರಿಂದ ಕದ್ದುಕೊಳ್ಳುವದನ್ನು ನಿಲ್ಲಿಸಿರಿ. ಮನುಷ್ಯನು ದೇವರಿಂದ ಕದ್ದುಕೊಳ್ಳಬಾರದು. ಆದರೆ ನೀವು ನನ್ನಿಂದ ಕದ್ದುಕೊಂಡಿದ್ದೀರಿ.
9 ಈ ರೀತಿಯಾಗಿ ನಿಮ್ಮ ಇಡೀ ಜನಾಂಗವೇ ನನ್ನಿಂದ ಕದ್ದುಕೊಂಡಿದ್ದಾರೆ. ಆದ್ದರಿಂದ ನಿಮಗೆ ದುರ್ದೆಶೆ ಸಂಭವಿಸುತ್ತಲಿದೆ.” ಇದು ಸರ್ವಶಕ್ತನಾದ ಯೆಹೋವನ ನುಡಿ.
10 ಸರ್ವಶಕ್ತನಾದ ಯೆಹೋವನು ಹೇಳುವುದೇನೆಂದರೆ, “ನೀವು ಈ ಪರೀಕ್ಷೆ ಮಾಡಿನೋಡಿ. ನಿಮ್ಮ ವಸ್ತುಗಳ ಹತ್ತನೇ ಒಂದು ಅಂಶವನ್ನು ನನಗೆ ತೆಗೆದುಕೊಂಡು ಬನ್ನಿರಿ. ಅವುಗಳನ್ನು ಆಲಯದ ಬಂಡಾರದೊಳಗೆ ಹಾಕಿರಿ. ನನ್ನ ಮನೆಗೆ ನೀವು ಆಹಾರ ವಸ್ತುಗಳನ್ನು ತನ್ನಿರಿ. ನನ್ನನ್ನು ಪರೀಕ್ಷಿಸಿರಿ. ನೀವು ಹೀಗೆ ಮಾಡುವುದಾದರೆ ಖಂಡಿತವಾಗಿಯೂ ನಾನು ನಿಮ್ಮನ್ನು ಆಶೀರ್ವದಿಸುವೆನು. ಆಕಾಶದಿಂದ ಮಳೆ ಸುರಿಯುವ ಹಾಗೆ ನಿಮಗೆ ಶುಭವು ಸುರಿಯುವವು. ನಿಮ್ಮ ಮನೆಯಲ್ಲಿ ಬೇಕಾಗಿರುವದಕ್ಕಿಂತ ಹೆಚ್ಚು ಯಾವಾಗಲೂ ಇರುವದು.
11 ನಿಮ್ಮ ಬೆಳೆಗಳು ಹುಳಗಳಿಂದ ನಾಶವಾಗದಂತೆ ನಾನು ಸಂರಕ್ಷಿಸುವೆನು; ನಿಮ್ಮ ದ್ರಾಕ್ಷಾಲತೆಗಳೆಲ್ಲಾ ದ್ರಾಕ್ಷಿಯನ್ನು ಫಲಿಸುವವು.” ಇದು ಸರ್ವಶಕ್ತನಾದ ಯೆಹೋವನ ನುಡಿ.
12 “ಇತರ ಜನಾಂಗಗಳವರು ನಿಮ್ಮೊಂದಿಗೆ ಸಮಾಧಾನದಿಂದಿರುವರು. ನಿಜವಾಗಿಯೂ ನಿಮ್ಮ ದೇಶವು ಆಗ ಆಶ್ಚರ್ಯಕರವಾದ ದೇಶವಾಗಿರುವುದು.” ಇದು ಸರ್ವಶಕ್ತನಾದ ಯೆಹೋವನ ನುಡಿ.
13 ಯೆಹೋವನು ಹೀಗೆನ್ನುತ್ತಾನೆ, “ನೀವು ನನಗೆ ವಿರುದ್ಧವಾಗಿ ಹೇಯ ಮಾತುಗಳನ್ನಾಡಿದಿರಿ.”
14 ನೀವು, “ದೇವರಾದ ಯೆಹೋವನನ್ನು ಆರಾಧಿಸುವುದು ನಿಷ್ಪ್ರಯೋಜಕ. ಆತನ ಕಟ್ಟಳೆಗಳನ್ನು ನಾವು ಅನುಸರಿಸಿದೆವು. ಆದರೆ ಅದರಲ್ಲಿ ನಮಗೇನೂ ಲಾಭವಾಗಲಿಲ್ಲ. ಸಮಾಧಿಯಲ್ಲಿ ಜನರು ರೋದಿಸುವ ಹಾಗೆ ನಮ್ಮ ಪಾಪಗಳಿಗಾಗಿ ನಾವು ರೋದಿಸಿದೆವು. ಆದರೆ ಅದರಿಂದ ನಮಗೇನೂ ಸಹಾಯವಾಗಲಿಲ್ಲ.
15 ಗರ್ವಿಷ್ಟರು ಸಂತೋಷವಾಗಿದ್ದಾರೆ ಎಂದು ನಾವು ತಿಳಿಯುತ್ತೇವೆ. ದುಷ್ಟಜನರು ಸಫಲತೆ ಹೊಂದುತ್ತಿದ್ದಾರೆ, ದೇವರ ತಾಳ್ಮೆಯನ್ನು ಪರೀಕ್ಷಿಸಲು ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಆದರೆ ದೇವರು ಅವರನ್ನು ಶಿಕ್ಷಿಸಲಿಲ್ಲ” ಎಂದು ಹೇಳಿದಿರಿ.
16 ದೇವರನ್ನು ಅನುಸರಿಸುವ ಭಕ್ತರು ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲು ಯೆಹೋವನು ಆಲೈಸಿದನು. ಆತನ ಮುಂದೆ ದೇವಜನರ ಹೆಸರುಗಳನ್ನು ಬರೆದಿರುವ ಒಂದು ಪುಸ್ತಕವಿತ್ತು. ಯೆಹೋವನ ಹೆಸರನ್ನು ಘನಪಡಿಸುವವರ ಹೆಸರುಗಳು ಅದರಲ್ಲಿದ್ದವು.
17 ಯೆಹೋವನು ಹೇಳುವುದೇನೆಂದರೆ, “ಅವರು ನನ್ನ ಜನರು. ನಾನು ಅವರಿಗೆ ಕರುಣೆ ತೋರಿಸುವೆನು. ತಂದೆಯು ತನಗೆ ವಿಧೇಯತೆ ತೋರಿಸುವ ತನ್ನ ಮಕ್ಕಳಿಗೆ ಕನಿಕರವುಳ್ಳವನಾಗಿರುತ್ತಾನೆ. ಅದೇ ರೀತಿಯಲ್ಲಿ ನನ್ನನ್ನು ಅನುಸರಿಸುವವರ ಮೇಲೆ ನಾನು ದಯೆ ತೋರಿಸುವೆನು.
18 ನೀವು ನನ್ನ ಬಳಿಗೆ ಹಿಂತಿರುಗಿ ಬರುವಿರಿ. ಆಗ ನೀವು ಒಳ್ಳೆಯವರಿಗೂ ಕೆಟ್ಟವರಿಗೂ ಇರುವ ವ್ಯತ್ಯಾಸವನ್ನು ತಿಳಿದುಕೊಳ್ಳುವಿರಿ. ಆಗ ನೀವು ದೇವರನ್ನು ಹಿಂಬಾಲಿಸುವವರಿಗೂ ಹಿಂಬಾಲಿಸದೆ ಇರುವವರಿಗೂ ಇರುವ ವ್ಯತ್ಯಾಸವನ್ನು ನೋಡುವಿರಿ.