1 ಆದ್ದರಿಂದ ಕ್ರಿಸ್ತನನ್ನು ಕುರಿತ ಆರಂಭದ ಪಾಠಗಳನ್ನು ನಾವು ಮುಗಿಸಿದವರಾಗಿರಬೇಕು. ನಾವು ಆರಂಭಿಸಿದ ಪಾಠಗಳಿಗೆ ಮತ್ತೆ ಹೋಗಬಾರದು. ನಮ್ಮ ಮೊದಲಿನ ದುಷ್ಕೃತ್ಯಗಳನ್ನು ತೊರೆದುಬಿಟ್ಟು ದೇವರಲ್ಲಿ ನಂಬಿಕೆಯನ್ನಿಟ್ಟು ಕ್ರಿಸ್ತನಲ್ಲಿ ನಮ್ಮ ಜೀವನವನ್ನು ಪ್ರಾರಂಭಿಸಿದೆವು.
2 ಆ ಸಮಯದಲ್ಲಿ ನಮಗೆ ದೀಕ್ಷಾಸ್ನಾನ, ಹಸ್ತಾರ್ಪಣ, ಸತ್ತವರ ಪುನರುತ್ಥಾನ ಮತ್ತು ನಿತ್ಯವಾದ ನ್ಯಾಯತೀರ್ಪು ಇವುಗಳನ್ನು ಕುರಿತು ಬೋಧಿಸಲಾಯಿತು. ಆದರೆ ಈಗ ನಾವು ಪೂರ್ಣ ತಿಳುವಳಿಕೆಗೆ ಹೋಗುವುದು ಅಗತ್ಯವಾಗಿದೆ.
3 ದೇವರ ಚಿತ್ತವಾದರೆ ಹೀಗೆ ಮುಂದಕ್ಕೆ ಸಾಗುತ್ತಾ ಹೋಗುವೆವು.
7 ಆ ಜನರು ತನ್ನ ಮೇಲೆ ಪದೇಪದೇ ಸುರಿಯುವ ಮಳೆಯನ್ನು ಹೀರಿಕೊಳ್ಳುವ ಭೂಮಿಯಂತಿದ್ದಾರೆ. ಅದು ಜನರಿಗೆ ಆಹಾರವನ್ನು ಕೊಡಲೆಂದು ರೈತನು ಅದರಲ್ಲಿ ಸಸಿಯನ್ನು ನೆಟ್ಟು ಬೆಳೆಸುತ್ತಾನೆ. ಅದು ಜನರಿಗೆ ಉಪಯುಕ್ತವಾದ ಬೆಳೆಗಳನ್ನು ಬೆಳೆಸಿದರೆ, ಅದಕ್ಕೆ ದೇವರಿಂದ ಆಶೀರ್ವಾದ ದೊರೆಯುತ್ತದೆ.
8 ಆದರೆ ಅದು ಮುಳ್ಳುಗಿಡಗಳನ್ನೂ ಕಳೆಯನ್ನೂ ಬೆಳೆಸಿದರೆ ನಿಷ್ಪ್ರಯೋಜಕವಾಗಿ ದೇವರ ಶಾಪಕ್ಕೆ ಗುರಿಯಾಗುತ್ತದೆ. ಆ ಭೂಮಿಯನ್ನು ಬೆಂಕಿಯಿಂದ ಸುಟ್ಟು ನಾಶಮಾಡಲಾಗುವುದು.
9 ಪ್ರಿಯ ಸ್ನೇಹಿತರೇ, ನಾವು ಈ ಸಂಗತಿಗಳನ್ನು ನಿಮಗೆ ಹೇಳುತ್ತಿದ್ದರೂ ನಿಮ್ಮಿಂದ ಇದಕ್ಕಿಂತಲೂ ಉತ್ತಮವಾದ ಕಾರ್ಯಗಳನ್ನು ಅಪೇಕ್ಷಿಸುತ್ತೇವೆ. ರಕ್ಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ನೀವು ಮಾಡುತ್ತೀರೆಂದು ನಾವು ದೃಢವಾಗಿ ನಂಬಿದ್ದೇವೆ.
10 ದೇವರು ನ್ಯಾಯವಂತನಾಗಿದ್ದಾನೆ. ನೀವು ಮಾಡಿದ ಉಪಕಾರವನ್ನು ಮತ್ತು ದೇವಜನರಿಗೆ ಸಹಾಯ ಮಾಡಿದ್ದರ ಮೂಲಕ ಮತ್ತು ಸಹಾಯ ಮಾಡುತ್ತಲೇ ಇರುವುದರ ಮೂಲಕ ನೀವು ಆತನಿಗೆ ತೋರಿದ ಪ್ರೀತಿಯನ್ನು ಆತನು ಮರೆತುಬಿಡುವುದಿಲ್ಲ.
11 ನಿಮ್ಮಲ್ಲಿ ಪ್ರತಿಯೊಬ್ಬರು ತಮ್ಮ ಇಡೀ ಜೀವನದಲ್ಲಿ ಇದೇ ಆಸಕ್ತಿಯುಳ್ಳವರಾಗಿ ನಿಮ್ಮ ನಿರೀಕ್ಷೆಯನ್ನು ದೃಢಪಡಿಸಿಕೊಳ್ಳಬೇಕೆಂದು ನಾವು ಅಪೇಕ್ಷಿಸುತ್ತೇವೆ.
12 ನೀವು ಸೋಮಾರಿಗಳಾಗಿರಬೇಕೆಂಬುದು ನಮ್ಮ ಅಪೇಕ್ಷೆಯಲ್ಲ. ದೇವರ ವಾಗ್ದಾನದ ಫಲಗಳನ್ನು ಪಡೆಯುವ ಜನರಂತೆ ನೀವಿರಬೇಕೆಂಬುದು ನಮ್ಮ ಅಪೇಕ್ಷೆ. ಆ ಜನರಿಗೆ ನಂಬಿಕೆ ಮತ್ತು ತಾಳ್ಮೆಯಿದ್ದುದರಿಂದ ಅವರು ದೇವರ ವಾಗ್ದಾನದಂತೆ ಫಲವನ್ನು ಪಡೆದರು.
13 ದೇವರು ಅಬ್ರಹಾಮನಿಗೆ ಒಂದು ವಾಗ್ದಾನ ಮಾಡಿದನು. ದೇವರಿಗಿಂತ ದೊಡ್ಡವನಿಲ್ಲ. ಆದ್ದರಿಂದ, ದೇವರು ತನ್ನ ಮೇಲೆಯೇ ಆಣೆಯಿಟ್ಟು ತನ್ನ ಮಾತಿನಂತೆಯೇ ಮಾಡಿದನು.
14 ಆತನು ಅವನಿಗೆ, “ನಾನು ನಿಜವಾಗಿಯೂ ನಿನ್ನನ್ನು ಆಶೀರ್ವದಿಸುತ್ತೇನೆ. ಅನೇಕಾನೇಕ ಸಂತತಿಗಳನ್ನು ನಿನಗೆ ದಯಪಾಲಿಸುವೆನು” ಎಂದು ಹೇಳಿದನು.
15 ಅಬ್ರಹಾಮನು ಇದರ ನೆರವೇರುವಿಕೆಗಾಗಿ ತಾಳ್ಮೆಯಿಂದ ಕಾದಿದ್ದನು. ತರುವಾಯ ಅವನಿಗೆ ದೇವರ ವಾಗ್ದಾನದ ಫಲ ದೊರೆಯಿತು.
16 ಜನರು ವಾಗ್ದಾನ ಮಾಡುವಾಗ ಯಾವಾಗಲೂ ತಮಗಿಂತ ದೊಡ್ಡವರಾದ ಯಾರಾದರೊಬ್ಬರನ್ನು ಬಳಸಿಕೊಳ್ಳುತ್ತಾರೆ. ಅವರು ಹೇಳಿದ್ದು ನಿಜವೆಂಬುದನ್ನು ಆ ವಾಗ್ದಾನವು ಶ್ರುತಪಡಿಸುತ್ತದೆ. ಇದರಿಂದಾಗಿ ಅವರ ಎಲ್ಲಾ ವಾಗ್ವಾದಗಳಿಗೆ ಕೊನೆಯಾಗುತ್ತದೆ.
17 ಹಾಗೆಯೇ ದೇವರು ತನ್ನ ವಾಗ್ದಾನವನ್ನು ಬಾಧ್ಯವಾಗಿ ಪಡೆಯುವ ಜನರಿಗೆ ತನ್ನ ಸಂಕಲ್ಪವು ಸ್ಥಿರವಾದದ್ದು ಎಂಬುದನ್ನು ಸ್ಪಷ್ಟಪಡಿಸಲು ಆಣೆಯಿಟ್ಟು ನಿಶ್ಚಯಪಡಿಸಿದನು.
18 ದೇವರ ವಾಗ್ದಾನ ಮತ್ತು ಆಣೆ ಅಚಲವಾದ ಎರಡು ಆಧಾರಗಳಾಗಿವೆ. ಇವುಗಳ ವಿಷಯದಲ್ಲಿ ನಮಗೆಂದಿಗೂ ಮೋಸವಾಗುವುದಿಲ್ಲ.
19 ಈ ನಿರೀಕ್ಷೆಯು ನಮ್ಮ ಆತ್ಮಗಳನ್ನು ಅಪಾಯದಲ್ಲಿ ಕೊಚ್ಚಿಕೊಂಡು ಹೋಗದಂತೆ ಕಾಪಾಡುವ ಬಲವಾದ ಸ್ಥಿರವಾದ ಲಂಗರಿನಂತಿದೆ. ಅದು ಸ್ವರ್ಗದಾಲಯದ ತೆರೆಯ ಮರೆಯಲ್ಲಿರುವ ಮಹಾ ಪವಿತ್ರಸ್ಥಳದ ಒಳಕ್ಕೆ ಪ್ರವೇಶಿಸುತ್ತದೆ.
20 ಯೇಸು ಈಗಾಗಲೇ ಅಲ್ಲಿಗೆ ಪ್ರವೇಶಿಸಿ, ಅನುಸರಿಸುವುದಕ್ಕಾಗಿ ಮಾರ್ಗವನ್ನು ತೋರಿದನು. ಯೇಸು ಮೆಲ್ಕಿಜೆದೇಕನಂತೆ ಸದಾಕಾಲಕ್ಕೂ ಇರುವ ಪ್ರಧಾನಯಾಜಕನಾಗಿದ್ದಾನೆ.